ನಿಜವಾದ ರೇವಂತ್ ರೆಡ್ಡಿ ಭವಿಷ್ಯ : ತೆಲಂಗಾಣದಲ್ಲಿ ಬಿಜೆಪಿ ಗೆಲುವಿಗೆ ಬಿಆರ್‌ಎಸ್‌ ಪರೋಕ್ಷ ಬೆಂಬಲ?

0 min read

ಹೈಲೈಟ್ಸ್‌:

  • ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಉತ್ತಮ ಸಾಧನೆ ಮಾಡಿದ ಬಿಜೆಪಿ
  • ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ತಲಾ ಎಂಟು ಸೀಟ್, ಒಂದು ಸೀಟ್ ನಲ್ಲಿ ಓವೈಸಿ ಗೆಲುವು
  • ಬಿಜೆಪಿಗೆ ಈ ಬಾರಿ ಬಿಆರ್‌ಎಸ್‌ ಪರೋಕ್ಷ ಬೆಂಬಲ ನೀಡಲಿದೆ ಎಂದಿದ್ದ ರೇವಂತ್ ರೆಡ್ಡಿ

ಹೈದರಾಬಾದ್ : ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವ ಹಾಗೇ, ಎನ್‌ಡಿಎ ಮೈತ್ರಿಕೂಟ ಜೂನ್ 9ರಂದು ಸತತವಾಗಿ ಮೂರನೇ ಬಾರಿಗೆ ಅಧಿಕೃತವಾಗಿ ಅಧಿಕಾರಕ್ಕೇರಲಿದೆ. ಆದರೆ, ಸೋಲು ಗೆಲುವಿನ ವಿಶ್ಲೇಷಣೆ, ಎಲ್ಲಿ ಯಾರಿಂದ ಯಾರಿಗೆ ಲಾಭ/ನಷ್ಟವಾಯಿತು ಎನ್ನುವ ಚರ್ಚೆ ಇನ್ನೂ ನಡೆಯುತ್ತಲೇ ಇದೆ.

ಹಿಂದೆ, ಅಧಿಕಾರದಲ್ಲಿದ್ದ ಕೆ.ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್‌ ಪಾರ್ಟಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹದಿನೇಳು ಲೋಕಸಭಾ ಸ್ಥಾನವನ್ನು ಹೊಂದಿರುವ ತೆಲಂಗಾಣದಲ್ಲಿ 2019ರಲ್ಲಿ ಬಿಆರ್‌ಎಸ್‌ ಒಂಬತ್ತು ಸ್ಥಾನವನ್ನು ಗೆದ್ದಿತ್ತು.

ಈ ಬಾರಿ ನಿರಾಶಾದಾಯಕ ಪ್ರದರ್ಶನ ನೀಡಿರುವ ಕೆಸಿಆರ್ ನೇತೃತ್ವದ ಪಾರ್ಟಿಗೆ, ಲೋಕಸಭೆಯಲ್ಲಿ ಈ ಬಾರಿ ತನ್ನ ಪ್ರತಿನಿಧಿಯೇ ಇಲ್ಲದಂತಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಿಂದೆ ಬಿಆರ್‌ಎಸ್‌ ಪಾತ್ರ ಬಹುಮುಖ್ಯವಾಗಿದೆ.

ಮೂರು ತಿಂಗಳ ಹಿಂದೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರೇವಂತ್ ರೆಡ್ಡಿ, ಬಿಆರ್‌ಎಸ್‌ ಪಕ್ಷವು ಬಿಜೆಪಿ ಜೊತೆಗೆ ಶಾಮೀಲಾಗಿದೆ ಎಂದು ಹೇಳಿದ್ದರು. ಕೆಸಿಆರ್ ಬೆಂಬಲದೊಂದಿಗೆ ಬಿಜೆಪಿ ಗೆಲ್ಲಬಹುದಾದ ಐದು ಕ್ಷೇತ್ರಗಳನ್ನೂ ರೇವಂತ್ ರೆಡ್ಡಿ ಉಲ್ಲೇಖಿಸಿದ್ದರು.

ರೇವಂತ್ ರೆಡ್ಡಿ ಹೇಳಿದಂತೆ ಆ ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಕಳೆದ ಬಾರಿ ರೇವಂತ್ ರೆಡ್ಡಿ ಪ್ರತಿನಿಧಿಸಿದ್ದ ಮಲ್ಕಾಜ್‌ಗಿರಿ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ಸಿಗೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಲ್ಕಾಜ್‌ಗಿರಿ, ಆದಿಲಾಬಾದ್, ಮೆಹಬೂಬ ನಗರ ಮುಂತಾದ ಕ್ಷೇತ್ರಗಳಲ್ಲಿ ಬಿಆರ್‌ಎಸ್‌ ಮೈತ್ರಿ ಮಾಡಿಕೊಂಡಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದರು. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿಯಿದ್ದ ಕ್ಷೇತ್ರಗಳಲ್ಲಿ ಬಿಆರ್‌ಎಸ್‌ ಮೂರನೇ ಸ್ಥಾನದಲ್ಲಿತ್ತು. ಜೊತೆಗೆ, ಈ ಪಾರ್ಟಿಯು ಪಡೆದ ಮತಗಳು ಒಂದೋ ಕಾಂಗ್ರೆಸ್ಸಿಗೆ ಇಲ್ಲವೇ ಬಿಜೆಪಿಗೆ ಗೆಲುವಿನ ದಡವನ್ನು ಸೇರಿಸಲು ಸಹಾಯವಾಗಿತ್ತು. ಅದರಲ್ಲೂ, ಬಿಜೆಪಿ ಗೆದ್ದ ಎಂಟು ಕ್ಷೇತ್ರಗಳಲ್ಲಿ ಕೆಸಿಆರ್ ಪಕ್ಷದ ಪಾತ್ರ ನಿರ್ಣಾಯಕವಾಗಿತ್ತು.

” ಹದಿನೇಳು ವರ್ಷದಿಂದ ವಿರೋಧ ಪಕ್ಷದಲ್ಲಿದ್ದೇನೆ, ನನ್ನ ಪರಿಶ್ರಮದಿಂದ ಮುಖ್ಯಮಂತ್ರಿಯಾಗಿದ್ದೇನೆ, ತಂದೆಯ ಹೆಸರು ಹೇಳಿಕೊಂಡು ಸಿಎಂ ಆದವನಲ್ಲ. ಬಿಆರ್‌ಎಸ್‌ ಸುಪಾರಿ ತೆಗೆದುಕೊಂಡ ಐದು ಕ್ಷೇತ್ರಗಳನ್ನು ಉಲ್ಲೇಖಿಸುತ್ತೇನೆ ” ಎಂದು ಸಿಎಂ ರೇವಂತ್ ರೆಡ್ಡಿ, ಕೆಸಿಆರ್ ಪುತ್ರನಿಗೆ ಟಾಂಗ್ ನೀಡಿದ್ದರು.

ಚಂದ್ರಶೇಖರ ರಾವ್ ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ರೇವಂತ್ ರೆಡ್ಡಿ ಮತ್ತು ಅಸಾದುದ್ದೀನ್ ಓವೈಸಿ ಕೂಡಾ ಆಪಾದಿಸಿದ್ದರು. ಪಕ್ಷದ ಹಿತಕ್ಕಿಂತ, ಕೆಸಿಆರ್ ತನ್ನ ಹಿತವನ್ನು ನೋಡಿದ್ದರಿಂದ, ಬಿಜೆಪಿ ಜೊತೆ ಪರೋಕ್ಷ ಹೊಂದಾಣಿಕೆಯನ್ನು ಮಾಡಿಕೊಂಡಿದ್ದಾರೆ. ಇದರ ಲಾಭವನ್ನು ಬಿಜೆಪಿ ಪಡೆದುಕೊಂಡಿತು ಎಂದು ರೇವಂತ್ ರೆಡ್ಡಿ ಟೀಕಿಸಿದ್ದಾರೆ.

You May Also Like

More From Author

+ There are no comments

Add yours